Friday, May 8, 2015

ಕೇವಲ ನಾಲ್ಕೂವರೆ ಸಾವಿರ ರೂಪಾಯಿಗಳಲ್ಲಿ ನಾಟ್ಕಾ ಮಾಡಿಸಿದ್ವಿ!



ಹೌದು ಕೇವಲ ನಾಲ್ಕೂವರೆ ಸಾವಿರ ರೂಪಾಯಿಗಳಲ್ಲಿ ನಾಟ್ಕಾ ಮಾಡಿಸಿದ್ದ್ವಿ.





ಎಷ್ಟು ಚೆಂದ ಗೊತ್ತಾ ಮಕ್ಕಳೊಡನಾಟ! ಅಂತೂ ನನ್ನ ಬಾಲ್ಯದ ಟೀಚರ್ ಆಗೊ ಕನಸು ಗೋರೆಗಾಂವ್ ಮುನ್ಸಿಪಾಲ್ಟಿ ಕನ್ನಡ ಶಾಲೆಯ ಮಕ್ಕಳು ನೆರವೇರಿಸಿ ನನ್ನನ್ನ ಧನ್ಯಳಾಗಿಸಿದರನ್ನಿ. ನನ್ನ ಟೀಚರ್‍ಗಿರಿ ಕಂಡು ಕೆಲವೊಮ್ಮೆ ಅವಿನಾಶ್ ಮತ್ತು ಅಕ್ಷತಾ ಇಬ್ಬರಿಗೂ ಆ ಮಕ್ಕಳ ಮೇಲೆ ಕರುಣೆಯೂ ನನ್ನ ಮೇಲೆ ಸಿಟ್ಟೂ ಏಕಕಾಲಕ್ಕೆ ಉಂಟಾಗುತ್ತಿದ್ದವು. ನಾನಾದ್ರೂ ಏನ್ ಮಾಡ್ಲಿ, ಟೀಚರ್‍ಗಿರಿ ಸುಲಭವಲ್ಲ ಅಂದು ಗೊತ್ತಾಗಿದ್ದೇ ಆಗ ನನಗೆ. ಮಕ್ಕಳೆಂದರೆ ಟೀಚರ್ ಹೇಳಿದ ಹಾಗೆ ಕೇಳಬೇಕು ಅನ್ನುವುದು ನನ್ನ ತಲೆಯಲ್ಲಿ ಫಿಕ್ಸ್ ಆಗಿತ್ತು ನನ್ನ ಬಾಲ್ಯದ ಸ್ಟೂಡಂಟ್‍ಗಿರಿಯನ್ನು ಮರೆಸಿ. ಈ ಮಕ್ಕಳೋ ಹೇಳಿ ಕೇಳಿ ಮುಂಬೈ ಮಕ್ಕಳು. ಹೆಚ್ಚಿನವರ ಮನೆಯಲ್ಲಿ ತುಳು ಮಾತಾಡುತ್ತಾರೆ ಮನೆಯಾಚೆ ಹಿಂದಿ ಜೊತೆಗೆ ಓದುತ್ತಿರುವುದು ಮುನ್ಸಿಪಾಲ್ಟಿ ಶಾಲೆಯಲ್ಲಿ! ನಟನೆಯ ಜೊತೆಗೆ ಕನ್ನಡವನ್ನೂ ಹೇಳಿಕೊಡಬೇಕಿತ್ತು ನಾವು!ಪಾಪ ಅವುಗಳಿಗೆ ಕನ್ನಡ ಓದಿ ಮಾತಾಡಿ ಅಂತ ನನ್ನಂಥ ಆದರ್ಶ ತುಂಬಿದ ಹೊಸಾಹೊಸಾ ಹುರುಪಿನ ಟೀಚರ್ ಪ್ರಾಣ ತಿಂದ್ರೆ ಅವಾದ್ರೂ ಏನ್ ಮಾಡಿಯಾವು!? ಏನೂ ಮಾಡ್ತಿರ್ಲಿಲ್ಲ, ನನ್ನ ಸಹನೆ ಪರೀಕ್ಷೆ ಮಾಡ್ತಿದ್ವು ಅಷ್ಟೇ. ಮತ್ತು ನನ್ನ ಸಹನೆ ಎರಡು ಮೂರು ದಿನಕ್ಕೊಮ್ಮೆ ನಪಾಸು ಮಕ್ಕಳೆದುರು... ಆದ್ರೂ ನಾಟ್ಕ ಮುಗಿಯೋವಷ್ಟರಲ್ಲಿ ಅವರಲ್ಲಿ ಮೂರ್ನಾಲ್ಕು ಜನ ಕನ್ನಡವನ್ನ ಮುಂಚಿನ ಹಾಗೆ ತಡಬಡಿಸದೆ ಆರಾಮಾಗಿ ಓದುವಂತಾಗಿದ್ದು ಖುಷಿ ಕೊಟ್ಟ ಸಂಗತಿ.

ಅವರ ಅಪರಿಚಿತತೆಯ ಸಂಕೋಚವನ್ನ ಬಿಡಿಸಿ, ಅದರ ಜಾಗದಲ್ಲಿ ಈ ಟೀಚರ್ ಅಂದ್ರೆ ಭಯ, ಅವಿನಾಶ್ ಸರ್ ಮತ್ತು ಅಕ್ಷತಾ ಟೀಚರ್ ಅಂದ್ರೆ ಪ್ರೀತಿ ಹುಟ್ಟಿಸಿ, ನೆಟ್ಟಗೆ ಒಂದೆಡೆ ನಿಲ್ಲುವುದರಿಂದ ಮೊದಲ್ಗೊಂಡು ಅವರವರ ಪಾತ್ರಗಳನ್ನ ಸಾಧ್ಯವಾದಷ್ಟೂ ಅವರುಗಳಿಗೆ ಅರ್ಥ ಮಾಡಿಸಲು ಯತ್ನಿಸಿ, ಡೈಲಾಗ್ಸ್ ಎಲ್ಲಾ ಅಭಿನಯಪೂರ್ವಕವಾಗಿ ಹೇಳುವಂತೆ ಮಾಡುವಷ್ಟರಲ್ಲಿ ನಾನೊಂದಿಷ್ಟು ಸಹನೆ ಕಲಿತಿದ್ದೆ. ನಾಟಕದ ದಿನ ಗೋರೆಗಾಂವ್ ಸಂಘದ ಎದುರು ಮಿನಿ ಬಸ್ಸನೇರಿದ ಮಕ್ಕಳೊಂದಿಗೆ ನಾನು ಮೃದುವಾಗಿದ್ದೆ. ಟೀಚರ್ ಮರೆಯಾಗಿ ಒರಿಜಿನಲ್ ಜಯಲಕ್ಷ್ಮೀ ಅಂದು ದಾರಿಯುದ್ದಕ್ಕೂ ಮಕ್ಕಳ ಜೊತೆಗಿದ್ದಳು. ಮಕ್ಕಳಿಗೋ ಶುರುವಿನಲ್ಲಿ ತುಸು ದಿಗಿಲು, ಇವ್ರು ಅದೇ ಸಿಡುಕು ಮೋರೆ ಟೀಚರ್ ತಾನೆ ಎಂದು. ಮಕ್ಕಳು ಕರಗೋಕೆ ಎಷ್ಟೊತ್ತು ಬೇಕು ಹೇಳಿ? ಹತ್ತು ಹದಿನೈದು ನಿಮಿಷದಲ್ಲಿ ಮಕ್ಕಳ ಮುಖದ ಬಿಗು ಸಡಿಲಗೊಂಡು ಚೈತನ್ಯದ ಚಿಲುಮೆಗಳಾದ್ರು. ನನಗದೇ ತಾನೇ ಬೇಕಾಗಿದ್ದುದು. ಎರಡು ಮಕ್ಕಳ ತಾಯಿಯಾಗಿ ಮಕ್ಕಳ ಮನಸ್ಥಿತಿ ಗೊತ್ತಿದ್ದರಿಂದ ರಿಹರ್ಸಲ್ ಟೈಮಲ್ಲಿ ತುಸು ಬಿಗುವಾಗಿದ್ದು ಮಕ್ಕಳು ಶಿಸ್ತಿನಿಂದ ಎಲ್ಲವನ್ನೂ ಅಭ್ಯಾಸ ಮಾಡುವಂತೆ ನೋಡಿಕೊಂಡು ನಾಟಕದ ದಿನ ಬಿಗು ಸಡಲಿಸಿದ್ದೇ ಮಕ್ಕಳು ಆತ್ಮವಿಶ್ವಾಸದ ಗಣಿಯಾದರು. ಯಾವುದೇ ಸೆಟ್ ಇಲ್ಲದೆ, ಹಾರ ಬಿಟ್ಟರೆ ಇನ್ನೊಂದು ಪ್ರಾಪರ್ಟಿ ಇಲ್ಲದೆ ನನ್ನ ಕಂದಮ್ಮಗಳು ಕೇವಲ ತಮ್ಮ ಚುರುಕುತನದಿಂದ ಮತ್ತು ಅಭಿನಯದಿಂದ ಅಲ್ಲಿದ್ದ ಪ್ರೇಕ್ಷಕರೆಲ್ಲರ ಮನಸ್ಸನ್ನ ಗೆದ್ದುಬಿಟ್ಟರು. ನಾಟಕ ಮುಗಿದಿದ್ದೇ ಸಭಾಂಗಣದಲ್ಲಿದ್ದ ಅರ್ಧಕ್ಕೂ ಹೆಚ್ಚು ಮಂದಿ ಧಾವಿಸಿ ಸೈಡ್ ವಿಂಗಲ್ಲಿ ಜಮಾಯಿಸಿ ಮಕ್ಕಳನ್ನು ಅಭಿನಂದಿಸಿದ್ದು ನೆನೆದರೆ ನನಗೆ ಇಂದಿಗೂ ರೋಮಾಂಚನ! ಈ ನಾಟಕದಲ್ಲಿ ಕಪ್ಪೆರಾಯನ್ನ ರಾಜಕುಮಾರಿ ಮದುವೆಯಾಗಿ, ಅವನು ಮತ್ತೆ ರಾಜಕುಮಾರನಾಗುವ ಸೀನ್ ಬರುತ್ತೆ. ಅದೆಷ್ಟು ನಾಚಿಕೆ ಅಂತೀರಿ ಮಕ್ಕಳಿಗೆ!! ತಮ್ಮ ನಿಜದ ಮದುವೆಯಲ್ಲಾದ್ರೂ ಅಷ್ಟು ನಾಚ್ಕೊಳ್ತಾವೋ ಇಲ್ವೋ, ರಿಹರ್ಸಲ್ಲಿನಲ್ಲಂತೂ ಮದುವೆ ಮಾಡ್ಸೋಕೆ ಪ್ರತೀ ಸಲ ಹರಸಾಹಸ ಪಡಬೇಕಿತ್ತು. ಮದುವೆ ಆಗೋವು ನಾಚಿಕೊಳ್ಳೋವು, ಉಳಿದ ಮಕ್ಕಳು ಆ ಸೀನ್ ಬಂದ ತಕ್ಷಣ ಕಿಸಿಕಿಸಿ ಅಂತ ನಗೋಕ್ ಶುರು ಮಾಡೋವು! ಎಷ್ಟು ಚೆಂದ ಮತ್ತು ಮುಗ್ಧ ಪ್ರಪಂಚ ಅದು! ಒಂದೊಂದು ಮಗುವೂ ತನ್ನದೇ ತುಂಟತನದಿಂದ, ಸಂಕೋಚದಿಂದ, ತರ್ಲೆಬುದ್ದಿಯಿಂದ ಇಷ್ಟ ಆಗಿತ್ತು. ಚೋಟುದ್ದ ಹುಡುಗನಿಗೂ ಇಗೊ ಕಾಡುತ್ತಿತ್ತು! ಪುಟಾಣಿ ಹೃದಯಕ್ಕೂ ನೋವು ಅರ್ಥ ಆಗ್ತಿತ್ತು!

ಎಲ್ಲ ಮಕ್ಕಳೂ ಮುದ್ದೇ. ಅದರಲ್ಲೂ ಲಕ್ಷ್ಮೀ ಎನ್ನುವ ಬಟ್ಟಲಗಣ್ಣಿನ ಮಗುವಂತೂ ನನಗೆ ಮತ್ತು ಅವಿನಾಶ್‍ಗೆ ಒಂದು ಕೈ ಹೆಚ್ಚೇ ಮುದ್ದು. ಆ ಅಂಥ ಲಕ್ಷೀ ನಾಟಕದ ಮಧ್ಯ ತನ್ನ ಡೈಲಾಗ್ ಹೇಳುವಾಗ ಒಂದು ಶಬ್ದವನ್ನು ಮರೆತಿತು. ಸಾಲನ್ನಲ್ಲ ಶಬ್ದವನ್ನ. ಮರೆತರೂ ಏನೂ ಆಗದವಳಂತೆ ತನ್ನ ಡೈಲಾಗ್ ಮುಗಿಸಿ ಸೈಡ್ ವಿಂಗಿಗೆ ಬಂದವಳ ಬಟ್ಟಲಗಣ್ಣ ತುಂಬಾ ನೀರು! ‘ಟೀಚರ್ ಮರೆತುಬಿಟ್ಟೆ ಟೀಚರ್, ನಾನು ಮರೆತುಬಿಟ್ಟೆ ಟೀಚರ್’ ಎಂದು ಅವಲತ್ತುಕೊಳ್ಳತೊಡಗಿದಳು. ಅವಳು ಹಾಗೆ ಕಣ್ಣುತುಂಬಿಕೊಂಡು ಮರೆತಿದ್ದರ ಬಗ್ಗೆ ಗಿಲ್ಟ್ ಅನುಭವಿಸಿದ ದೃಶ್ಯ ಈಗಷ್ಟೇ ಕಣ್ಣ ಮುಂದೆ ನಡೆದಷ್ಟು ನಿಚ್ಚಳ ನನ್ನ ಮನದಲ್ಲಿ... ನೆಕ್ಸ್ಟ್ ಸೀನ್ ಅವಳದ್ದೇ ಇತ್ತು. ಬೆಕ್ಕಾಗಿ ಮತ್ತೆ ರಂಗಪ್ರವೇಶಿಸಬೇಕಿತ್ತು ಆ ಮಗು. "ನೀನು ತಪ್ಪೇ ಮಾಡಿಲ್ಲ, ನೀನೇ ಹಾಗಂದ್ಕೋತಾ ಇದ್ದಿ, ನೋಡು ಮುಂದಿನ ಸೀನ್ ನಿನ್ನದೇ ಅಲ್ವಾ? ನಗೊ ಬೆಕ್ಕು ಅತ್ರೆ ಚೆನ್ನಾಗಿರುತ್ತಾ?" ಅಂತ ಮುಂತಾಗಿ ಏನೋ ಪೂರ್ತಿ ನೆನಪಿಲ್ಲ, ಅವಳ ಕಿವಿಯಲ್ಲಿ ಪಿಸುಗುಟ್ಟಿ, ನಗಿಸಿ ಸ್ಟೇಜಿಗೆ ಕಳಿಸಿದೆ. ಹಿರೋಯಿನ್ ಸೈಡ್ ವಿಂಗಲ್ಲಿ ಏನೂ ಆಗೇ ಇಲ್ಲ ಅನ್ನೋ ಥರ ನಟಿಸಿ ಮುಗಿದ ಮೇಲೆ ಸೈಡ್ ವಿಂಗಲ್ಲಿ ನಿಂತಿದ್ದ ನನ್ನೆಡೆ ನೋಡಿ ಮುದ್ದಾದ ನಗು ಬೀರಿದಳು, ಚೆನ್ನಾಗ್ ಮಾಡ್ದೆ ತಾನೆ ಎನ್ನುವಂತೆ.
ಲವ್ ಯೂ ಲಕ್ಷ್ಮೀ, ಆಗಾಗ ನೆನಪಾಗ್ತಾ ಇರ್ತಿಯ ಕಂದಾ ನೀನು. ಈಗ ಎಲ್ಲಿದೀಯೋ ಏನ್ ಓದಿದ್ಯೋ, ಏನ್ ಮಾಡ್ತಿದೀಯೊ... ಸುಖವಾಗಿರು ಕೂಸೆ.
ಬಹುಶಃ ೨೦೦೨ ಅಥವಾ ೨೦೦೩ರಲ್ಲಿರಬೇಕು. ನನ್ನ ಮರೆವಿನ ಮಹಾಮಾರಿ ಕೃಪೆಯಿಂದಾಗಿ ಸರಿ ನೆನಪಾಗ್ತಿಲ್ಲ. ಮುಂಬೈನ ಕನ್ನಡ ಕಲಾ ಕೇಂದ್ರ ಮಕ್ಕಳ ನಾಟಕೋತ್ಸವ ಏರ್ಪಡಿಸಿ ನಾಟಕಗಳನ್ನ ಆಹ್ವಾನಿಸಿತ್ತು. ಆಯ್ಕೆಯಾದ ತಂಡಕ್ಕೆ ೨೦೦೦ ರೂಪಾಯಿಗಳ ಗೌರವಧನ ಕೊಡಲಾಗುವುದು ಎಂದಿತ್ತು ಪ್ರಕಟಣೆಯಲ್ಲಿ. ಅದನ್ನು ಓದಿ ಮಕ್ಕಳ ನಾಟಕವನ್ನು ಮಾಡಿಸುವ ಮನಸ್ಸಾಯ್ತು ನನಗೆ. ಅಷ್ಟಾದ್ರೆ ಸಾಕೆ? ನಾಟಕಕ್ಕೆ ಮಕ್ಕಳು ಬೇಡ್ವೆ? ಕಾಸು ಬೇಡ್ವೆ? ವಿಷಯ ಹೊತ್ತು ನನಗೆ ಗೊತ್ತಿರುವ ಎರಡು ಕನ್ನಡ ಸಂಘಗಳನ್ನು ಸಂಪರ್ಕಿಸಿದೆ. ಒಂದು ಮಾಟುಂಗಾ ಕರ್ನಾಟಕ ಸಂಘ. ಇನ್ನೊಂದು ಗೋರೆಗಾಂವ್ ಕರ್ನಾಟಕ ಸಂಘ. ಗೋರೆಗಾಂವ್ ಕರ್ನಾಟಕ ಸಂಘದವರು ರಿಹರ್ಸಲ್‍ಗೆ ಜಾಗ ಕೊಟ್ಟು, ನಾಟಕಕ್ಕೆ ಹೋಗಿಬರುವ ವ್ಯವಸ್ಥೆ ಮಾಡಿಕೊಟ್ಟು ಮೇಲೆ ೨೫೦೦ ರೂಪಾಯಿಗಳನ್ನು ಕೊಡುತ್ತೇವೆ ಅಂದರು. ನನಗೋ ದಿಗಿಲು! ಬರೀ ಎರಡೂವರೆ ಸಾವಿರದಲ್ಲಿ ಹೇಗೆ ನಾಟಕ ಮಾಡಿಸೋದು?! ಕನಿಷ್ಟ ಒಂದೈದು ಸಾವಿರನಾದ್ರೂ ಕೊಡಿ ಎಂದು ಕೇಳಿಕೊಂಡೆ. ಪಾಪ ಅವರುಗಳದ್ದೂ ಮಜಬೂರಿ, ಇಲ್ಲ ೨೫೦೦ ಅಷ್ಟೆ ಕೊಡೋಕಾಗೋದು, ಕನ್ನಡ ಕಲಾಕೇಂದ್ರದವರು ಕೊಡುವ ಹಣವನ್ನೂ ನಾಟಕಕ್ಕೇ ಬಳಸಿಕೊಳ್ಳಿ, ಅದನ್ನೇನು ಸಂಘಕ್ಕೆ ಕೊಡುವುದು ಬೇಡ ಅಂದ್ರು. ಕನ್ನಡ ಕಲಾಕೇಂದ್ರದವರೋ ನಾಟಕ ಮುಗಿದ ಮೇಲೆ ಹಣ ಕೊಡ್ತಾರೆ. ಹಣ ಇಲ್ಲ ಅಂತ ಈಗ ಕೈಬಿಟ್ರೆ... ಊಂಹೂಂ ಬಿಡೋಕೆ ಮನಸಿಲ್ಲ, ಹೇಗಾದ್ರೂ ಸರಿ ಅಷ್ಟರಲ್ಲೇ ಎಷ್ಟಾಗುತ್ತೋ ಅಷ್ಟು ಅಂತ ನಿರ್ಧರಿಸಿ, ಸ್ನೇಹಿತರಾದ ಅವಿನಾಶ್ ಮತ್ತು ಅಕ್ಷತಾರ ಜೊತೆ ಚರ್ಚಿಸಿ, ನಾನು ನಿರ್ದೇಶಿಸೋದು, ಅವಿನಾಶ್ ಸಂಗೀತ ಸಂಯೋಜನೆ ಮತ್ತು ಅಕ್ಷತಾ ಹಾಡೋದು ಅಂತ ಹೊರಟ್ವಿ. ಮಕ್ಕಳ ಜೊತೆಗಿನ ಒಡನಾಟವನ್ನ ಈಗಾಗ್ಲೆ ಹೇಳಿದೀನಿ. ಅದರಾಚೆ ಕೈಯಲ್ಲಿರೊ ಕಾಸು ತಲೆಗೆಳೆದ್ರೆ ಕಾಲಿಗಿಲ್ಲ, ಕಾಲಿಗೆಳೆದ್ರೆ ತಲೆಗಿಲ್ಲ ಅನ್ನೊ ಚಾದರದ ರೀತಿ! ಹೀಗಾಗಿ ಯಾವುದೇ ಸೆಟ್ ಪ್ರಾಪರ್ಟಿ ಗೋಜಿಗೂ ಹೋಗಲೇ ಇಲ್ಲ! ಎಲ್ಲ ಮಕ್ಕಳಿಗೂ ಬಟ್ಟೆ ಕೊಂಡುಕೊಂಡ್ರೆ ಇಲ್ಲಾ ಎಲ್ಲಾ ಬಟ್ಟೆನೂ ಬಾಡಿಗೆ ತಂದ್ರೆ ಕೈಲಿರುವ ಹಣದ ದುಪ್ಪಟ್ಟು ಖರ್ಚಾಗುತ್ತದೆಂದೆಣಿಸಿ, ಅನಿವಾರ್ಯವಾದುದನ್ನಷ್ಟೆ ಬಾಡಿಗೆ ತಂದು, ಒಂದಿಷ್ಟನ್ನು ದಾದರ್‍ನಲ್ಲಿ ಕೊಂಡ್ಕೊಂಡು, ನನ್ನ ಮನೆಯಿಂದೆರೆಡು ಸೀರೆ ಕುಪ್ಪಸ ತಂದು ಅಡ್ಜಸ್ಟ್ ಮಾಡಿದ್ವಿ. ಕಿರಿಟ ಇತ್ಯಾದಿಗಳನ್ನ ರಟ್ಟು ಬೇಗಡಿಯನ್ನೆಲ್ಲಾ ತಂದು ತಯಾರಿಸಿದ್ವಿ. ಅವಿನಾಶ್ ತಮ್ಮ ಸ್ನೇಹಿತರಲ್ಲಿ ಕೇಳಿ ತಬಲಾ ಮತ್ತು ಕೀ ಬೋರ್ಡನ್ನು ತಂದಿದ್ದಲ್ಲದೆ, ಪುಗಸಟ್ಟೆ ತಬಲಾ ನುಡಿಸಲು ಸ್ನೇಹಿತರೊಬ್ಬರ ಮನವೊಲಿಸಿ ಕರೆತಂದಿದ್ದರು. ಅಕ್ಷತಾ ಚೆಂದವಾಗಿ ಹಾಡಿದರು. ನನಗೆ ತಿಳಿದಂತೆ ಮೇಕಪ್ ಮಾಡಿದೆ. ಅಂತೂ ಇಂತೂ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ, ಕನ್ನಡ ಸರಿ ಬಾರದ ಮಕ್ಕಳಿಂದ ನೋಡಿದವರೆಲ್ಲಾ ಎಂಥಾ ಎನರ್ಜಿಟಿಕ್ ಆಗಿ ನಾಟ್ಕಾ ಮಾಡಿದ್ವು ಮಕ್ಳು ಅನ್ನುವಂತೆ ನಾಟಕ ಮಾಡಿಸಿದ್ವಿ.
ಅಂದ ಹಾಗೆ ಆ ನಾಟಕದ ಹೆಸರು ‘ಢಾಣಾಡಂಗುರ’. ವೈದೇಹಿಯವರು ಬರೆದ ಮಕ್ಕಳ ನಾಟಕಗಳಲ್ಲಿ ಒಂದಿದು.
ನಾಟಕದ ರಿಹರ್ಸಲ್‍ನ ಬ್ರೇಕ್ ಹೊತ್ತಲ್ಲಿ ಕೀಬೋರ್ಡ್ ನುಡಿಸುತ್ತಾ, ಅವಿನಾಶ್ ಹಾಡಿಕೊಳ್ಳುತ್ತಿದ್ದ ಹಾಡು ಕಿವಿ ಮೇಲೆ ಬಿದ್ದಾಗಲೆಲ್ಲ ಆ ಮಕ್ಕಳು, ನಾಟಕ, ಲಕ್ಷ್ಮೀ ಎಲ್ಲಾ ನೆನಪಾಗುತ್ತೆ.

Saturday, March 28, 2015

ನಾಟಕ ವಿಮರ್ಶೆ: ಆಟಿ ತಿಂಗೊಲ್ದ ಒಂಜಿ ದಿನ

ಮೂಲಆಷಾಢ್ ಕಾ ಏಕ್ ದಿನ್ --> ಕನ್ನಡದಲ್ಲಿಆಷಾಢದ ಒಂದು ದಿನ --> ತುಳುವಿನಲ್ಲಿಆಟಿ ತಿಂಗೊಲ್ದ ಒಂಜಿ ದಿನ ನಾಟಕ









ಆತ್ರಾಡಿ ಸುರೇಶ್ ಹೆಗ್ಡೆಯವರು ತೆಗೆದ ಭಾವಚಿತ್ರ




ಅತ್ರಾಡಿ ಸುರೇಶ್ ಹೆಗ್ಡೆಯವರು ತೆಗೆದ ಭಾವಚಿತ್ರ
____________________________________________________________


*ಮೋಹನ್ ರಾಕೇಶ್ ಅವರು ನಮ್ಮ ದೇಶದ ಒಬ್ಬ ಪ್ರಮುಖ, ಅತ್ಯುತ್ತಮ ನಾಟಕಕಾರ. ಕನ್ನಡಕ್ಕೆ ಅನುವಾದಗೊಂಡ ಅವರ ‘ಆಧೆ ಅಧೂರೆ’ ನಾಟಕದಲ್ಲಿ ಅಭಿನಯಿಸಿ ಮತ್ತು ಈ ‘ಆಷಾಢದ ಒಂದು ದಿನ’ ನಾಟಕವನ್ನು ಓದಿ ಅವರ ಸಂಭಾಷಣೆಗಳನ್ನು ಮತ್ತು ದೃಶ್ಯಗಳನ್ನು ಕಟ್ಟಿಕೊಡುವ ತಾಕತ್ತಿನ ಬಗ್ಗೆ ನಮ್ಮ ಗಿರೀಶ್ ಕಾರ್ನಾಡರ ತುಘಲಕ್, ಹಯವದನ, ಅಂಜುಮಲ್ಲಿಗೆ ಇತ್ಯಾದಿಗಳ ಕುರಿತ ರೀತಿಯಲ್ಲೇ ಬೆರಗುಗೊಂಡಿದ್ದೇನೆ. 
‘ಆಷಾಢದ ಒಂದು ದಿನ’  ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತಿದೆಯೇನೋ ಎಂಬಷ್ಟು ಸಂಭಾಷಣಾ ಪ್ರಧಾನ ನಾಟಕವಾದರೂ (ಆಧೆ ಅಧೂರೆ ಸಹ!) ಏನೂ ಹೇಳದೆಯೂ ಬಹಳಷ್ಟನ್ನು ಹೇಳಿಬಿಡುತ್ತಾರೆ ಮೋಹನ್ ರಾಕೇಶ್, ಥೇಟ್ ಕಾವ್ಯದಂತೆ! ಅದು ಕಾಳಿದಾಸ-ಮಲ್ಲಿಕಾರ ಪ್ರೀತಿ ಇರಬಹುದು, ಮಲ್ಲಿಕಾಳಿಗೆ ಅಮುಖ್ಯವೆನಿಸಿದರೂ ಕಾಳಿದಾಸನಷ್ಟೆ ಮುಖ್ಯವಾಗುವ ವಿಲೋಮನಿರಬಹುದು, ಬೆಳೆದ ಮಗಳ ಭಾವ ಪ್ರಪಂಚದಿಂದಾಗಿ ಹಣ್ಣಾದ ಅಂಬಿಕಾ ಇರಬಹುದು, ರಾಜಕುಮಾರಿ ಪ್ರಿಯಾಂಗು ಇರಬಹುದು, ಎಲ್ಲ ಪಾತ್ರಗಳ ವ್ಯಕ್ತಿತ್ವಗಳನ್ನೂ ನಮ್ಮ ಕಲ್ಪನಾ ಪ್ರಪಂಚದನುಸಾರ ನಮ್ಮ ನಮ್ಮ ಮನಸಿನಲ್ಲಿ ರೂಪುಗೊಳ್ಳಲ್ಲು ಅದೆಷ್ಟು ಅನುವು ಮಾಡಿಕೊಡುತ್ತಾರೆಂದರೆ, ರಂಗಮಂಚದಿಂದಾಚೆಗೂ ನಾಟಕ ಪ್ರೇಕ್ಷಕನ ಮನದ ಅಂಗಣಕ್ಕನುಗುಣವಾಗಿ ಬೆಳೆದು ಆಡ ತೊಡಗುತ್ತದೆ,ಕಾಡ ತೊಡಗುತ್ತದೆ! 

ಇಂಥ ಈ ನಾಟಕವನ್ನ ನಾನು ಓದಿ ೧೨-೧೩ ವರ್ಷಗಳ ಮೇಲಾಯಿತು. ನಾನು ಓದುವ ಮುಂಚೆಯೇ ಈ ನಾಟಕದಲ್ಲಿ ಅನುನಾಸಿಕನಾಗಿ ಅಭಿನಯಿಸಿಯೂ ಇದ್ದ ಅವಿಯೊಡನೆ (ಅವಿನಾಶ್ ಕಾಮತ್) ಆಗಾಗ ಈ ನಾಟಕದ ಬಗ್ಗೆ ಚರ್ಚಿಸಿದ್ದಿದೆ. ಅವಿಯೊಳಗಿನ ಕಲಾವಿದನ ಅಭಿನಯದ ತುಡಿತಕ್ಕೆ ಪಕ್ಕಾದ ‘ವಿಲೋಮ’ನ ಪಾತ್ರದ ಕನವರಿಕೆಯನ್ನು ಕೇಳಿ ಕೇಳಿ, ಈ ನಾಟಕ ಅಂದ್ರೆ ಕಾಳಿದಾಸ ಮತ್ತು ಮಲ್ಲಿಕಾ  ನಂತರ, ಮೊದಲು  ವಿಲೋಮ ಎಂದುಕೊಳ್ಳುವಷ್ಟು! 
‘ಆಷಾಢದ ಒಂದು ದಿನ’ವನ್ನು, ವಿಲೋಮನನ್ನು ರಂಗದ ಮೇಲೆ ಕಾಣುವ ಈ ಕನ್ನಡತಿಯ ಆಸೆ ಸಾಕಾರವಾಗಿದ್ದು ಮಾತ್ರ ತುಳುವಿನಲ್ಲಿ! :) 

*ಮೋಹನ್ ರಾಕೇಶ್ ಅವರ ಹಿಂದಿ ಮೂಲದ ನಾಟಕ ತುಳುವಿನಲ್ಲಿ ನಿನ್ನೆ ಮತ್ತು ಮೊನ್ನೆ ಬೆಂಗಳೂರಿನ (ದಿನಾಂಕ: ೨೬ ಮಾರ್ಚ್ ೨೦೧೫ ಹಾಗೂ ೨೭ ಮಾರ್ಚ್ ೨೦೧೫) ಕಲಾಗ್ರಾಮದಲ್ಲಿ ‘ಅನೇಕ’ ತಂಡ (ಸುರೇಶ್ ಆನಗಳ್ಳಿ ಅವರ ತಂಡ) ಮತ್ತು ದೃಶ್ಯ ತಂಡ ( ದಾಕ್ಷಾಯಣಿ ಭಟ್ ಅವರ ತಂಡ) ಆಯೋಜಿಸಿದ್ದು ಇಲ್ಲಿ ಫೇಸ್‍ಬುಕ್‍ನ ಒಂದಿಷ್ಟು ಸ್ನೇಹಿತರಿಗೆ ಗೊತ್ತೇ ಇದೆ. ಕಲಾಗ್ರಾಮದಲ್ಲಿ ಹೌಸ್‍ಫುಲ್ ಆಗಿ ಜನಮನ ಗೆದ್ದ ಮುಂಬೈನ ‘ಕಲಾಭಾರತಿ’ ತಂಡದ ಈ ನಾಟಕ ಕಲಾಸೌಧದಲ್ಲೂ ಜನ ಮೆಚ್ಚುಗೆ ಪಡೆದುಕೊಂಡಿತು.

ತುಳು ಭಾಷೆಯ ಆಂಡ್, ಬುಡ್ಚಿ, ಇಜ್ಜಿ ಯಂಥಹ ನಾಲ್ಕಾರು ಶಬ್ದಗಳನ್ನು ಬಿಟ್ಟರೆ, ಮೂರಡಿ ತಲೆ ಮೇಲಿಂದ ಹಾರುವ ಭಾಷೆ ಅದು ನನಗೆ! ಆದರೂ ಕನ್ನಡ ಅವತರಣಿಕೆಯನ್ನು ಮುಂಚೆಯೇ ಓದಿಕೊಂಡಿದ್ದೆನ್ನಲ್ಲಾ ಅದು ಈ ಹೊತ್ತಲ್ಲಿ ನೆರವಾಯಿತು. 

*ಉತ್ತಮ ನಿರ್ದೇಶನ (ಭರತಕುಮಾರ ಪೊಲಿಪು). 

*ಸಂಗೀತ ಮತ್ತು ಬೆಳಕುಗಳೂ ಉತ್ತಮವಾಗಿದ್ದವು. 

*ಸಂಗೀತ (ರಾಮಚಂದ್ರ ಹಡಪದ) ಸಂಭಾಷಣೆ ಜೊತೆ ಇನ್ನಷ್ಟು ಮಿಳಿತವಾಗಿದ್ದಲ್ಲಿ ಅಂದರೆ ವಾಕ್ಯಗಳ ನಡು ನಡುವೆ ಸಂಭಾಷಣೆಯ ಹಿನ್ನೆಲೆಯಾಗಿ ಬರಬೇಕಾದ ಆಲಾಪಗಳು, ಸ್ವರಗಳು,‘ಕೆಲವೆಡೆ’ಯಲ್ಲಿ ಜೊತೆಜೊತೆಗೆ ಬರುತ್ತಿದುದು ಮಾತುಗಳು ಪ್ರೇಕ್ಷಕರನ್ನು ತಲುಪುವಲ್ಲಿ ಸೋಲಿಸುತ್ತಿದ್ದವು. ತುಂಬಾ ಒಳ್ಳೆಯ ಸಂಗೀತ ಸಂಯೋಜನೆ, ಹಾಡುಗಾರಿಕೆ ಮತ್ತು ಧ್ವನಿ ರಾಮಚಂದ್ರ ಹಡಪದ್ ಅವರದು ಎನ್ನುವುದರಲ್ಲಿ ಎರಡು ಮಾತಿಲ್ಲ. 
ಮೊದಲನೇಯ ಬ್ಲಾಕ್ ಔಟ್‍ ಹೊತ್ತಲ್ಲಿ ಶುರುವಾಗುವ ಹಾಡು ಇನ್ನಷ್ಟು ವಿಷಾದದ ಧಾಟಿಯಲ್ಲಿರಬೇಕಿತ್ತು ಅಥವಾ ನನ್ನಂತೆ ಅಭಿಪ್ರಾಯ ಪಟ್ಟ, ತುಳು ಬಲ್ಲ ರಂಗಕರ್ಮಿಯೊಬ್ಬರ ಪ್ರಕಾರ ಹಾಡಿನ ಬದಲಿಗೆ ಹಮ್ಮಿಂಗ್ ಇದ್ದಿದ್ದರೆ ಸರಿಯಾಗಿರೋದು. (ಭಾಷೆ ಬಲ್ಲವರಿಗೆ ಹಾಡಿನ ಅರ್ಥ ಗೊತ್ತಾಗುವುದರಿಂದ ಗಮನ ಆ ಕಡೆ ಹರಿಯುವುದು ಸಹಜ. ಆದರೆ ಭಾಷೆ ಗೊತ್ತಿಲ್ಲದವರಿಗೆ ಅಷ್ಟೊತ್ತಿನ ದೃಶ್ಯ ಮಲ್ಲಿಕಾಳ ಅಗಲಿಕೆಯ ನೋವನ್ನೇ ಬದಿಗೊತ್ತಿದ ಸಂಭ್ರಮವನ್ನೂ ಮೀರಿಸಿ ಅಂಬಿಕಾಳ ವಿಷಾದ ಗಾಢವಾಗುವುದು ಅನುಭವಕ್ಕೆ ಬರುತ್ತಾದ್ದರಿಂದ ದೃಶದ ಕೊನೆಯಲ್ಲಿ ಶುರುವಾಗುವ ಹಾಡಿನ ರಾಗ ಮತ್ತು ಲಯ ವಿಷಾದಕ್ಕೆ ವ್ಯತಿರಿಕ್ತ ಅನಿಸುತ್ತವೆ ಮತ್ತು ಬ್ಲಾಕ್‍ಔಟ್‍ನಲ್ಲೇ ಹಾಡನ್ನು ಮೊಟಕುಗೊಳಿಸಿದಲ್ಲಿ  ಬ್ಲಾಕ್‍ಔಟ್ ದೀರ್ಘವಾಗುವುದನ್ನು ತಪ್ಪಿಸಬಹುದು ಅನಿಸಿತು ನನಗೆ. 
 ತಬಲಾ ಮತ್ತು ರಿದಂ‍ನಲ್ಲಿ ಹಡಪದ ಅವರಿಗೆ ಚೆಂದದಿಂದ ಸಾಥ್ ಕೊಟ್ಟವರು ಮುಂಬೈನ ಕಲಾವಿದ ಮನೋಜ್ ರಾವ್. 
*ನಾಟಕದ ಹೆಚ್ಚಿನ ಭಾಗ ಪ್ರಖರವಲ್ಲದ, ಹಳದಿ ಬೆಳಕೇ ಇತ್ತಾದರೂ ಅದು ಇಡೀ ನಾಟಕಕ್ಕೆ ಪೂರಕವಾಗಿತ್ತು (ಸಂಯೋಜನೆ: ಅರುಣಮೂರ್ತಿ, ನಿರ್ವಹಣೆ ರಜನಿಕಾಂತ್).  ಕಿಟಕಿಯನ್ನು ತುಂಬಾ ಚೆಂದವಾಗಿ, ಆಕರ್ಷಕವಾಗಿ ತೋರಿಸುತ್ತಿದ್ದ ಬೆಳಕು, ಪಾತ್ರಧಾರಿಗಳೆಲ್ಲ ಕಿಟಕಿ ಬಳಿ ಬಂದು ಮಾತನಾಡುವಾಗಲೆಲ್ಲ ಅವರ ಮುಖ ಸರಿ ಕಾಣದಂತೆ ಮಾಡಿಬಿಡುತ್ತಿತ್ತು. ಅಲ್ಲಿ ಬಂದಾಗಲೆಲ್ಲ ಪಾತ್ರಧಾರಿಗಳು ಬೆಳಕನ್ನು ತೆಗೆದುಕೊಳ್ಳಲು ಕಷ್ಟಪಡಬೇಕಿತ್ತು. ಅದಿಷ್ಟನ್ನು ಸರಿ ಮಾಡಿಕೊಂಡದ್ದಾದರೆ ಅಲ್ಲಿ ನಿಂತು ಮಾತಾಡುವ ಪತ್ರಧಾರಿಗಳ ಎಲ್ಲ ಮುಖ್ಯ ಮಾತುಗಳ ಜೊತೆಗಿನ ಮುಖಭಾವವೂ ಪ್ರೇಕ್ಷಕನಿಗೆ ತಲುಪಿ ಇನ್ನೂ ಗಾಢ ಅನುಭವವನ್ನು ಕೊಡಬಲ್ಲವು.

*ಒಂದೇ ಸ್ಥಳದಲ್ಲಿ (ಮಲ್ಲಿಕಾಳ ಮನೆ) ಇಡೀ ನಾಟಕ ನಡೆಯುತ್ತದೆ. ವಿಶ್ವೇಶ್ವರ ಪರ್ಕಳ ಅವರ ಕಲಾತ್ಮಕತೆಯ ಕುರಿತು ಎರಡು ಮಾತಿಲ್ಲ. ಅವರ ಮುಂಚಿನ ಹಲವಾರು ರಂಗವಿನ್ಯಾಸಗಳನ್ನೂ ನೋಡಿರುವೆ ನಾನು. ಚೆಂದವಾಗಿ, ನಾಟಕಕ್ಕೆ ಪೂರಕವಾಗಿ ವಿನ್ಯಾಸ ಮಾಡುತ್ತಾರೆ. ಈ ನಾಟಕದ ಮಲ್ಲಿಕಾಳ ಮನೆಯ ಬಡತನವನ್ನು ಇದೇ ವಿನ್ಯಾಸದಲ್ಲಿ ಬಿಂಬಿಸಬಹುದಾದ ಸಾಧ್ಯತೆಗಳಿನ್ನೂ ಇವೆ. ಪರ್ಕಳರಿಗೆ ಇದು ಅಸಾಧ್ಯವಾದುದೇನಲ್ಲ.

*ಪ್ರಸಾಧನ (ಮೋಹನ್) ಮತ್ತು ವೇಷ-ಭೂಷಣ (ದಾಕ್ಷಾಯಿಣಿ ಭಟ್) ಪಾತ್ರಕ್ಕೆ ತಕ್ಕುದಾಗಿದ್ದವು. (ಬಡತನದ ಮಲ್ಲಿಕಾಳ ಕೊರಳಲ್ಲಿ ಹೊಳೆಯುವ ಕಲ್ಲಿನ ಹಾರ ಮಾತ್ರ ಬೇಡವಾಗಿತ್ತು ಎನಿಸಿತು)

ಇನ್ನು.... :)

*ನನ್ನ ಮುಂಬೈ ಕಲಾವಿದ ಸ್ನೇಹಿತರ ಅಭಿನಯದ ತಾಕತ್ತಿನ ಕುರಿತು ಎರಡು ಮಾತಿಲ್ಲ! ಅವರುಗಳನ್ನು ಅವರೇ ಮೀರಿಸುತ್ತಿರುತ್ತಾರೆ ಒಂದು ಶೋದಿಂದ ಇನ್ನೊಂದು ಶೋನಲ್ಲಿ, ಒಂದು ನಾಟಕದಿಂದ ಇನ್ನೊಂದು ನಾಟಕದಲ್ಲಿ! ಬೆಂಗಳೂರಿನ ಎರಡೂ ದಿನದ ಪ್ರಯೋಗಗಳನ್ನು ನೋಡಿದವರಿಗೆ ಇದು ಮನದಟ್ಟಾಗಿರುತ್ತದೆ. 

@ ವಿಲೋಮನಾಗಿ ಅಭಿನಯಿಸಿದ ಅವಿನಾಶ್ ಕಾಮತ್ ಅವರಿಗೂ ತುಳು ಬಾರದು. ಅವಿಯ ಹಂಬಲ ಇನ್ನಾದರೂ ಈಡೇರಿಸಲೆಂಬಂತೆ ತುಳುವಿನಲ್ಲಿ ಅವತರಿಸಿದನೇನೋ ವಿಲೋಮ! :) ತುಳು ಬಲ್ಲವರೂ, 'ಊಂಹೂಂ ತುಳು ಬರೊಲ್ಲ ಅಂತ ಮಜಾಕ್ಮಾಡ್ತಿದ್ದೀರಿ ನೀವು!’ ಅನ್ನುವಷ್ಟರ ಮಟ್ಟಿಗೆ ಸುಲಲಿತವಾಗಿ ಮಾತನಾಡಿ ತುಳುವನ್ನು ಈ ನಾಟಕದಲ್ಲಿ ತಮ್ಮದಾಗಿಸಿಕೊಂಡ ಅವಿನಾಶ್, ಅದೇ ವಿಲೋಮನನ್ನು ಎರಡೂ ದಿನ ಭಿನ್ನ ಭಿನ್ನ ಆಯಾಮದಲ್ಲಿ ನೋಡುವಂತೆ ಅಭಿನಯಿಸಿ ಬೆರಗು ಮೂಡಿಸಿದರು! ಇನ್ನು ಭಾಷೆಯೆ ಅರಿಯದ ನನ್ನ ಮಟ್ಟಿಗೆ ತುಳುವಿನಲ್ಲಿ ಮತ್ತು ‘ವಿಲೋಮ’ನಾಗಿ ಅವಿಗೆ ಫಸ್ಟ್ ರ್ಯಾಂಕ್! :)

@ ಕಾಳಿದಾಸನ ಪಾತ್ರದಲ್ಲಿ ಮೋಹನ್ ಮಾರ್ನಾಡ್: ಅಭಿನಯ ಇವರಿಗೆ ನೀರು ಕುಡಿದಷ್ಟು ಸರಾಗ! ಧ್ವನಿಯ ಏರಿಳಿತವನ್ನು ಚೆನ್ನಾಗಿ ಬಲ್ಲ ಮೋಹನ್ ಸ್ವಲ್ಪ ಗಟ್ಟಿಯಾಗಿ (ಧ್ವನಿಯ ವಾಲ್ಯೂಮ್ ಹೆಚ್ಚು ಮಾಡಿ) ಮಾತನಾಡಿದ್ದರೆ ಕಾಳಿದಾಸನ ಗೊಣಗುವಿಕೆಯೂ ಪ್ರೇಕ್ಷಕರನ್ನು ತಲುಪುತಿತ್ತು. 

@ ಮಲ್ಲಿಕಾ ಆಗಿ ಸುಧಾ ಶೆಟ್ಟಿ  ಮೂರನೇಯ ಅಂಕದಲ್ಲಿ ಸೂಪರ್ಬ್ (ಇವರೂ ಸಹ ಧ್ವನಿಯ ವಾಲ್ಯೂಮ್ ಎತ್ತರಿಸಿಕೊಳ್ಳಬೇಕು). 

@ ಅಂಬಿಕಾ ಆಗಿ ಶೈಲಿನಿ ರಾವ್ ತುಂಬಾ ಚೆನ್ನಾಗಿ ಅಭಿನಯಿಸಿದರು. ಬೆಳದ ಮಗಳಿಗೆ ಹೆಚ್ಚಿಗೆ ಹೇಳಲಾಗದ ಸಂಕಟ, ಅವಳ ಬಾಳು ಕಲ್ಪನಾಲೋಕದಲ್ಲೇ ಕಳೆದು ಹೋಗುತ್ತಿರುವುದನ್ನು ನೋಡಲಾಗದ ತಳಮಳ, ಅಸಹಾಯಕತೆಗಳನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ತಲುಪಿಸಿದರು.

॒ ಮಾತುಲಾ ಆಗಿ ಹಿರಿಯ ಕಲಾವಿದರಾದ ಕೆ.ವಿ.ಆರ್ ಐತಾಳ್ ತಮ್ಮ ಎಂದಿನ ಸಹಜ ನಟನೆಯ ಮೂಲಕ ಪುಟ್ಟ ಪಾತ್ರವಾದರೂ ಮನ ಗೆಲ್ಲುತ್ತಾರೆ.

@ ದಂತುಲ ಮತ್ತು ಅನುಸ್ವಾರನಾಗಿ ನನ್ನ ತಮ್ಮ ಸುರೇಂದ್ರಕುಮಾರ ಮಾರ್ನಾಡ್/ ಸೂರಿ : ನಿರ್ದೇಶಕರ ನಟ ಸೂರಿ. ಹೇಗೆ ಮೋಲ್ಡ್ ಮಾಡ್ತಾರೊ ಹಾಗೆ ಹೊಂದಿಕೊಳ್ಳುವ ತಾಕತ್ತಿನ ಫ್ಲೆಗ್ಸಿಬಲ್ ನಟ. (ವಿಭಿನ್ನ ಪಾತ್ರಗಳು ಸಿಗಬೇಕಿದೆ ಸೂರಿಗೆ) , ನಿಕ್ಷೇಪ ಮತ್ತು ಅನುಸಾರನಾಗಿ ಲತೇಶ್ ಪೂಜಾರಿ (ಈ ಹುಡುಗನ ಅಭಿನಯದ ಬಗ್ಗೆ ಕೇಳಿದ್ದೆ, ಈ ನಾಟಕದಲ್ಲಿ ಇರುವ ಇಷ್ಟಿಷ್ಟೇ ಅವಕಾಶಗಳನ್ನೂ ಚೆಂದವಾಗಿ ಬಳಸಿಕೊಂಡು ನಾನು ಕೇಳಿದ್ದು ಸರಿ ಅನ್ನುವುದನ್ನು ಮನದಟ್ಟು ಮಾಡಿಸಿದ) ಇಬ್ಬರೂ ತಮ್ಮ ಎರಡೂ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು. 

@ ರಾಜಕುಮಾರಿ ಪ್ರಿಯಾಂಗುಮಂಜರಿಯಾಗಿ ಕೃಪಾ ಪೂಜಾರಿ ಅವರು, ಮಾತುಗಳಲ್ಲಿ ನೋಟದಲ್ಲಿ ಗೆದ್ದರೂ ಇನ್ನೊಂಚೂರು ಗತ್ತು ಮತ್ತು ನಡಿಗೆಯ ಗಾಂಭಿರ್ಯ ಇದ್ದಿದ್ರೆ ಇನ್ನೂ ಚೆನ್ನಾಗಿರೋದು ಅನಿಸಿತು.

"ವಿಲೋಮ ಯಾರು? ಒಬ್ಬ ಅಯಶಸ್ವಿ ಕಾಳಿದಾಸ.... 
ಕಾಳಿದಾಸ ಯಾರು? ಒಬ್ಬ ಯಶಸ್ವೀ ವಿಲೋಮ!" 
(ಇದೇ ನಾಟಕದಲ್ಲಿನ ಸಾಲು ಇದು)

- ಜಯಲಕ್ಷ್ಮೀ ಪಾಟೀಲ್